ಕವಿಸಮಯ

ಕಾಳನ್ನೆಲ್ಲವ ಪಡೆದು ಜಳ್ಳನ್ನೆಲ್ಲವ ತೂರಿಬಿಡಿ, ಎಲ್ಲವೂ ಜಳ್ಳಾದಲ್ಲಿ ಬರೆದವನ ಪೊಳ್ಳೆನ್ನದಿರಿ

Wednesday, February 22, 2006

ಟೈಮ್ ಪಾಸ್

ನೀನು ದುರುಗುಟ್ಟಿ ನೋಡುತ್ತಿರುವುದನ್ನು ಅನಿತಾ ತೋರಿಸಿದಾಗಲೂ, ನಿನ್ನ ನಾಚಿಕೆಯಿಲ್ಲದ ನೆಟ್ಟ ನೋಟ ಹಾಗೆಯೇ ಇತ್ತು. ಇಷ್ಟು ಸುಂದರವಾಗಿರುವ ನಿನ್ನನ್ನು ತಾನಾಗಿದ್ದರೆ ಹೋಗಿ ಖಂಡಿತ ಮಾತನಾಡಿಸಿಬರುತ್ತಿದ್ದೆ ಎಂದು ಗೇಲಿಮಾಡಿದಳು.ನೀನು ಹಾಗೆ ದುರುಗುಟ್ಟಿ ನೋಡುತ್ತಿದ್ದರೂ ನನ್ನ ಬಳಿ ಬರಲು ಭಯವೇ ? ಛೇ ನಾಚಿಕೆ ಇರಬಹುದು ಎಂಬ ಕಾರಣ ಬರಿ ಪೊಳ್ಳು. ಅದೇನಾದರೂ ಇದ್ದಿದ್ದರೆ, ನಮ್ಮ ನೋಟಗಳೆರಡು ಕೂಡಿದಾಗ , ಕಂಡೂ ಕಾಣದವನಂತೆ ದೃಷ್ಟಿ ಬೇರೆಡೆಗೆ ಸರಿಸುತ್ತಿದ್ದೆ. ಆದರೂ ನಿನ್ನ ಕಂಡಾಕ್ಷಣ ನಿನ್ನ ಕಣ್ಣಿನ ಮುಗ್ಧತೆ,ರೂಪ ನನ್ನನ್ನು ಸೆಳೆಯದೇ ಇರಲಿಲ್ಲ. ಅದರೂ ಇಲ್ಲದ ತೊಂದರೆಯನ್ನು ಗಂಟಿಕ್ಕಿಕ್ಕೊಳ್ಳಬಾರದು ಎಂದು ಮನಸ್ಸಿನಲ್ಲೇ ನಿರ್ಧರಿಸಿ ಮನೆಯೆಡೆಗೆ ನಡೆದೆ. ಎಷ್ಟಾದರೂ ನೀನು ಅಪರಿಚಿತನಲ್ಲವೆ ?. ಮನೆಗೆ ಹೋಗುವಾಗ ಸಿಕ್ಕುವ ಜಾರುಬಂಡೆಯಂತಿರುವ ರಸ್ತೆಯಲ್ಲಿ ನಡೆದು ಬರುವಾಗ ಯಾರೋ ನನ್ನನ್ನು ಹಿಂಬಾಲಿಸುವಂತೆನ್ನಿಸಿ ಹಿಂದುರುಗಿ ನೋಡಿದಾಗ ಮತ್ತೆ ನಿನ್ನ ದರ್ಶನವಾಯಿತು. “ ಥೂ ! ನಾನು ನೋಡಿದ್ದೇ ತಪ್ಪಾಯಿತು. ಅನಗತ್ಯ ತಲೆನೋವು ಎದುರಾಯಿತಲ್ಲಾ” ಎಂದು ಒಮ್ಮೆ ನನ್ನನ್ನೇ ಬೈದುಕೊಂಡೆ. ಅಲ್ಲೇ ಬಳಿ ಬಂದು ಚೆನ್ನಾಗಿ ಬೈದು, ಬೇಕಾದರೆ ಅಲ್ಲೇ ತಿರುಗಾಡುತ್ತಿರುವ ಬೆರಳೆಣಿಕೆಯ ಜನರನ್ನು ಸೇರಿಸಿ ಜಗಳ ಪ್ರಾರಂಭಿಸಬಹುದೆಂದು ಯೋಚಿಸಿದೆ.ಅದರೆ ಧೈರ್ಯಬರಲಿಲ್ಲ. ಜಗಳದಲ್ಲಿ ನೀನು ಕೋಪಗೊಂಡು ಗಾಯಗೊಳಿಸಿದರೆ, ಒಬ್ಬಳೇ ಆಸ್ಪತ್ರೆಗೆ ತಿರುಗಬೇಕಾಗುತ್ತದೆ ಎಂದೆನ್ನಿಸಿ ಹಾಗೆಯೇ ಮುಂದೆ ನಡೆದೆ. ರಸ್ತೆ ಕೊನೆಯವರೆಗೂ ಹಿಂದಿರುಗಿ ನೋಡದೆ ನಡೆದು, ಅರಳಿ ಮರದ ಜೋಡಿ ರಸ್ತೆ ಸಿಕ್ಕಾಗ ಸ್ವಲ್ಪ ಧೈರ್ಯ ಬಂತು. ಈ ಜನನಿಬಿಡ ರಸ್ತೆಯಲ್ಲಿ ಹಿಂಬಾಲಿಸುವ ಧೈರ್ಯ ಯಾರಿಗಿದೆ ? ಎಂದೆನ್ನುತ್ತಾ ಮತ್ತೆ ತಿರುಗಿ ನೋಡಿದಾಗ ನಿನ್ನನ್ನು ಕಂಡು ಅಶ್ಚರ್ಯವಾಯಿತು. ನಿನ್ನ ತಾಳ್ಮೆಯನ್ನು ಮೆಚ್ಚಲೇಬೇಕು, ಇಷ್ಟು ದೂರ ಹಿಂಬಾಲಿಸುವುದು ಕಷ್ಟವೇ ಸರಿ. ಹಿಂಬಾಲಿಕೆಯಲ್ಲೂ ಸೌಜನ್ಯವೇ ? ಹಿಂಬಾಲಿಸುತ್ತಿರುವಂತೆ ಕಾಣದಿರಲು ದೂರ ಕಾಯ್ದುಕೊಳ್ಳುತ್ತಿರುವುದು. ಜೊಲ್ಲು ಸುರಿಸಿಕೊಂಡು ಬೀದಿ ತಿರುಗುವ ನಿಮ್ಮಂಥವರಿಗೆ ಸೌಜನ್ಯಗಳ ಗಂಧವಿದೆಯೇ ?
ಸುಮ್ಮನೆ ಅಲಕ್ಷಿಸಿ ನಡೆದರೆ, ತೆಪ್ಪಗೆ ಹಿಂದಿರುಗುತ್ತೀಯ ಎಂದು ಗೊಣಗಿಕೊಂಡು ನಡೆದೆ. ಅರಳಿಮರದ ಕೆಳಗೆ ಕುಳಿತುಕೊಳ್ಳುವ ಪಡ್ಡೆ ಹುಡುಗರು, ಸೋಮಾರಿಗಳು ನಾನು ನಡೆದುಬರುವುದನ್ನು ನೋಡುತ್ತಿರುವಾಗ, ನಿನ್ನ ಅವರ ನೋಟಗಳ ವ್ಯತ್ಯಾಸದ ಅರಿವಾಯಿತು. ಗೆಳೆತನದ ಅಪೇಕ್ಷೆಯ ನೋಟಕ್ಕೂ, ಲಂಪಟ ನೋಟಕ್ಕೂ ವ್ಯತ್ಯಾಸ ತಿಳಿಯುವ ಬುದ್ಧಿಮತ್ತೆ ನನ್ನಲ್ಲಿದೆ. ಈಗ ನೀನು ನನ್ನೊಂದಿಗಿದ್ದಿದ್ದರೆ ನನ್ನನ್ನು ಗೇಲಿಮಾಡುವುದಿರಲಿ, ನೋಡಲೂ ಅವರು ಹೆದರುತ್ತಿದ್ದರು ಎನ್ನಿಸಿತು.ಇದ್ದಕ್ಕಿದ್ದಂತೆ ನಿನ್ನ ಗೆಳೆತನದ ಬಗ್ಗೆ ಯೋಚಿಸತೊಡಗಿದೆ. ಮನೆಯಲ್ಲಿ ಯಾವ ತೊಂದರೆ ಆಗುವುದಿಲ್ಲ .ಅಪ್ಪ ತುಂಬಾ “ಬಿಂದಾಸ್” ಆಸಾಮಿ. ಇಲ್ಲಿಯವರೆಗೆ ನಾನು ಮಾಡಿರುವ ಕೆಲಸವನ್ನು ವಿರೋಧಿಸಿಲ್ಲ. ತಪ್ಪಾಗಿ ಕಂಡಾಗ ಮಾತ್ರ,ಅದರಿಂದ ಎದುರಾಗುವ ತೊಂದರೆಗಳನ್ನು ಎಳೆ ಎಳೆಯಾಗಿ ಅವರು ವಿವಿರಿಸಿದಾಗ ,ನನಗೆ ಅದೆಷ್ಟು ಬಾರಿ ಮನಃಪರಿವರ್ತನೆಯಾಗಿಲ್ಲ. ಅಮ್ಮ ಸ್ವಲ್ಪ ಕೋಪಮಾಡಿಕೊಳ್ಳಬಹುದು. ಹೊಸಬರು, ಯಾರೇ ಇರಲಿ ಸಂಶಯದ ದೃಷ್ಟಿಯಿಂದ ನೋಡುವುದು ಅವರ ಅಭ್ಯಾಸ.ಆದರೂ ಅಮ್ಮ ತುಂಬಾ ಒಳ್ಳೆಯವರು.ನಿನ್ನ ಕಣ್ಣಿನ ಮುಗ್ಧತೆಯನ್ನು ಕಂಡಾಗ ಅವರೂ ಕರಗಿ ಸುಮ್ಮನಾಗುತ್ತಾರೆ. ಆದರೂ ಕೆಲವು ಸೋಮಾರಿಗಳ ಕಾಡುಹರಟೆಗೆ ಹೆದರಿ ನಿನ್ನ ಗೆಳೆತನ ಬೆಳೆಸಿದರೆ ನಿನ್ನನ್ನು ಉಪಯೋಗಿಸಿದಂತಾಗುವುದಿಲ್ಲವೆ ? . ಈ ವ್ಯರ್ಥ ಚಿಂತೆಗಳಲ್ಲಿ ಕಾಲಹರಣ ಮಾಡಬಾರದು. ಕೆಲಸ ಸಾಕಷ್ಟಿದೆ. ಪರೀಕ್ಷೆಗಳು ಹತ್ತಿರವಾಗುತ್ತಿವೆ, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಕ್ಕುವಂತಾಗಬೇಕು. ಅದೂ ಮೆರಿಟ್ ಸೀಟು. ಅಪ್ಪನಿಗೆ ಹೊರೆಯಾಗದೇ ಸ್ವಂತ ಕಾಲಿನ ಮೇಲೆ ನಿಂತಾಗ ಅಮ್ಮನ ದಿನನಿತ್ಯದ “ಮನೆ ಕೆಲಸ ಕಲಿತುಕೊ” ರಾಗಕ್ಕೆ ಮಂಗಳ ಹಾಡಿದಂತಾಗುತ್ತದೆ.” ನಾನು ಇಷ್ಟೆಲ್ಲಾ ಓದಿರುವುದು ಮನೆಯಲ್ಲಿ ಅಡಿಗೆಮಾಡಿಕೊಂಡು ಸುಮ್ಮನಿರುವುದಕ್ಕಲ್ಲ , ಏನಾದರೂ ಸಾಧಿಸಬೇಕು, ಹೆಸರುಗಳಿಸಬೇಕು “ ಎಂದು ಹುಮ್ಮಸ್ಸಿನಿಂದ ನಡೆಯತೊಡಗಿದೆ. ಮನೆಯ ರಸ್ತೆ ತಿರುವಿನಲ್ಲಿಯೂ ನಿನ್ನ ಬಗ್ಗೆ ಯೋಚಿಸುತ್ತಿರಲಿಲ್ಲ, ಆದರೆ ನೀನು ನಡೆದು ಬರುತ್ತಿರುವುದು ಮಾತ್ರ ಕಾಣಿಸಿತು. ಕೊನೆಯ ಬಾರಿ ನಿನ್ನ ಕಣ್ಣುಗಳನ್ನು ಒಮ್ಮೆ ನೋಡಿಬಿಡಬೇಕೆಂದು ತಿರುಗಿದೆ. ನಿನ್ನ ಕಣ್ಣುಗಳ ಮುಗ್ಧತೆಯಲ್ಲಿ ನನ್ನ ದೃಢನಿಶ್ಚಯವೆಲ್ಲಾ ಕರಗಿ ಅಲ್ಲೇ ನಿಂತುಬಿಟ್ಟೆ. ಆಗ ಅನುಭವಿಸಿದ ತಳಮಳ, ಅವಿಸ್ಮರಣೀಯ ! ಕೆಲವು ಕ್ಷಣಗಳು ಮುಂದೇನು ಮಾಡಬೇಕೆಂದು ತಿಳಿಯದಂತಾದರೂ ಭಯ, ಅನಿಶ್ಚಿತತೆಗಳ ನಡುವೆ ವಿಚಿತ್ರವಾದ ಸಂತೋಷವನ್ನೂ ಅನುಭವಿಸುತ್ತಿದ್ದೆ. ಸರಿ ಅದ್ದದ್ದಾಗಲಿ ಎಂದು ಗಟ್ಟಿ ಮನಸ್ಸು ಮಾಡಿ ನಿನ್ನೆಡೆಗೆ ಕೈಮಾಡಿ ಕರೆದಾಗ, ಒಡನೆ ಬಳಿ ಬಂದು ನೀನು ಬಾಲವಲ್ಲಾಡಿಸಿದೆ.

1 Comments:

Anonymous Anonymous said...

ಶ್ರೀಕಾಂತ್,
ಯಾಹೂದಲ್ಲಿ ಮಾತನಾಡುತ್ತಿದ್ದಾಗ ನೀವು ಕಳುಹಿಸಿದ ಈ ಲಿಂಕ್ ನೋಡಿದೆ. "ನಿಮ್ಮ ಬ್ಲಾಗ್‌ನಲ್ಲಿ ಬರಿಯ ಕನ್ನಡ ಮಾತ್ರ ಕಾಣುತ್ತಿಲ್ಲ-ಜೊತೆಗೆ ಬರವಣಿಗೆಯಲ್ಲಿನ ನಿಮ್ಮ ಆಸಕ್ತಿಯನ್ನು ಸಹ ತೋರಿಸುತ್ತದೆ." ಬರವಣಿಗೆ ಬರೆಯುತ್ತಾ ಹೋದಂತೆ ಹದಗೊಳ್ಳುವ ಪರಿಯೇ ಖುಷಿಕೊಡುವಂತದ್ದು. ನಿಮ್ಮಂತಹ ಯುವಕರು ಬರೆದದ್ದನ್ನು ಓದಿ ಗಮನಿಸುವುದು ನನಂತಹವನಿಗೆ ಎಂದಿಗೂ ಖುಷಿಕೊಡುವಂತದ್ದು. ಮುಂದುವರೆಸಿ.
ಶೇಖರ್‍ಪೂರ್ಣ

1:05 PM  

Post a Comment

<< Home